ಕನ್ನಡ ಜಾನಪದ ಪರಿಷತ್ ಪರಿಚಯ
ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ ಸ್ಥಾಪಿತವಾದ ಸಾಂಸ್ಕೃತಿಕ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಇಂದು ಪರಿಷತ್ತಿಗೆ 31 ಜಿಲ್ಲಾ ಘಟಕಗಳು, 218 ತಾಲೂಕು ಘಟಕಗಳು, 323 ಹೋಬಳಿ ಘಟಕಗಳು ಹಾಗೂ 1765 ಗ್ರಾಮ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ 3 ಗಡಿನಾಡು ಘಟಕಗಳು ಮತ್ತು 3 ಹೊರನಾಡು ಘಟಕಗಳು, ಬೆಂಗಳೂರಿನ ಮಹಾನಗರದಲ್ಲಿ 15 ವಿಧಾನಸಭಾ ಕ್ಷೇತ್ರ ಘಟಕಗಳು, 7 ಜಿಲ್ಲೆಗಳಲ್ಲಿ ಮಹಿಳಾ ಘಟಕಗಳು ಹಾಗೂ 31 ಜಿಲ್ಲೆಗಳಲ್ಲಿ ಜಾನಪದ ಯುವ ಬ್ರಿಗೇಡ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಈ ಪರಿಷತ್ತು ಮೌಖಿಕ ಪರಂಪರೆ ಮತ್ತು ಪ್ರದರ್ಶನ ಕಲೆಗಳನ್ನು ಹಳೆಯ ತಲೆಮಾರಿಯಿಂದ ಹೊಸ ತಲೆಮಾರಿಗೆ ದಾಖಲಿಕೆ ಮತ್ತು ತರಬೇತಿ ಮೂಲಕ ಪರಿಚಯಿಸುವ ಉದ್ದೇಶದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. “ವಿಕಾಸಕ್ಕಾಗಿ ಜಾನಪದ” ಎಂಬ ಕಾರ್ಯಕ್ರಮದ ಮೂಲಕ ರಾಜ್ಯದಾದ್ಯಂತ ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ.
ಸರ್ಕಾರದ ಯಾವುದೇ ಅನುದಾನವಿಲ್ಲದೆ, ಜನರ ಸಹಕಾರದಿಂದಲೇ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಕಳೆದ ಹತ್ತು ವರ್ಷಗಳಲ್ಲಿ 12,568 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಪ್ರತಿ ವರ್ಷ ರಾಜ್ಯಮಟ್ಟದಲ್ಲಿ ಹಿರಿಯ ಮೂಲ ಜನಪದ ಕಲಾವಿದರನ್ನು ಗುರುತಿಸಿ “ಜಾನಪದ ಪ್ರಪಂಚ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. ಯುವಜನರನ್ನು ಉತ್ತೇಜಿಸಲು “ಯುವ ಜಾನಪದ ಪ್ರಪಂಚ ಪ್ರಶಸ್ತಿ” ನೀಡುವ ಮೂಲಕ ಸಾಧನೆಗೈದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಪರಿಷತ್ತು ಯಶಸ್ವಿಯಾಗಿ ನಡೆಸಿದೆ. ಅವುಗಳಲ್ಲಿ ಗೋಕರ್ಣ ಹಾಗೂ ಮರವಂತೆಯಲ್ಲಿ ರಾಜ್ಯಮಟ್ಟದ ಜಲ ಜಾನಪದೋತ್ಸವ, ಶಿವಮೊಗ್ಗದಲ್ಲಿ ರಾಜ್ಯ ಜೋಗಿ ಸಮ್ಮೇಳನ (ಶ್ರೀ ನಾಡಿಗದ ಅವರ ಅಧ್ಯಕ್ಷತೆಯಲ್ಲಿ), ಬೆಂಗಳೂರಿನ ಸಿಂಗಾಪುರ ಲೇಔಟ್ನಲ್ಲಿ ರಾಜ್ಯ ಗೊರವರ ಸಮ್ಮೇಳನ, ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರಮಟ್ಟದ ಗಾಳಿಪಟ ಸ್ಪರ್ಧೆ ಮತ್ತು ಉತ್ಸವ, ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರಾಜ್ಯ ಬುಡಕಟ್ಟು ಉತ್ಸವ, ಬಬಲೇಶ್ವರದಲ್ಲಿ ವಿಭಾಗ ಮಟ್ಟದ ಜಾನಪದ ಸಮ್ಮೇಳನ, ರಾಯಚೂರಿನಲ್ಲಿ ರಾಜ್ಯ ಮಹಿಳಾ ಜಾನಪದ ಸಮ್ಮೇಳನ, ಕಲ್ಬುರ್ಗಿಯಲ್ಲಿ ಒಡಪು ಸ್ಪರ್ಧೆ, ತರೀಕೆರೆಯಲ್ಲಿ ರಾಜ್ಯಮಟ್ಟದ ಒಗಟು ಸ್ಪರ್ಧೆ, ಹಾಸನದಲ್ಲಿ ರಾಜ್ಯಮಟ್ಟದ ಗಾದೆ ಸ್ಪರ್ಧೆ, ರಾಮನಗರದ ಕನಕಪುರದಲ್ಲಿ ಹೆಣ್ಣುಮಕ್ಕಳ ಜಡೆಯುವ ಸ್ಪರ್ಧೆ, ದಾವಣಗೆರೆಯಲ್ಲಿ ರಾಜ್ಯಮಟ್ಟದ ಜನಪದ ಗೀತಾಗಾಯನ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ರಾಜ್ಯದಾದ್ಯಂತ 10 ಜಾನಪದ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ.ಇದು ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಿದೆ.
ದಶಮಾನೋತ್ಸವದ ಅಂಗವಾಗಿ 10 ಜಿಲ್ಲೆಗಳಲ್ಲಿ ಜಾನಪದ ನೃತ್ಯ ಹಾಗೂ ಗೀತೆ ಸ್ಪರ್ಧೆಗಳನ್ನು, ಕನ್ನಡ ಜಾನಪದ ಪರಿಷತ್ ಯುವ ಘಟಕದ ವತಿಯಿಂದ ರಾಜ್ಯ ಯುವ ಜಾನಪದ ಸಮ್ಮೇಳನವನ್ನು, ಹುಬ್ಬಳ್ಳಿಯಲ್ಲಿ ಹಾಗೂ ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಹಿಳಾ ಜಾನಪದ ಸಮ್ಮೇಳನಗಳನ್ನು ಆಯೋಜಿಸಲು ಯೋಜಿಸಲಾಗುವುದು.
ಕನ್ನಡ ಜಾನಪದ ಪರಿಷತ್ – ದಶಮಾನೋತ್ಸವ ಘೋಷಣೆ 🌾
ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳು ಹಾಗೂ ಗೌರವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
🏆 ರಾಜ್ಯ ಮಟ್ಟದ ಗೌರವ ಪ್ರಶಸ್ತಿಗಳು
✨ ದಶಮಾನೋತ್ಸವ ರಾಜ್ಯ ಗೌರವ ಪ್ರಶಸ್ತಿ – 10 ವಿವಿಧ ಕ್ಷೇತ್ರಗಳ ಸಾಧಕರಿಗೆ
✨ ದಶಮಾನೋತ್ಸವ ರಾಜ್ಯ ಯುವ ಗೌರವ ಪ್ರಶಸ್ತಿ – 10 ಯುವ ಸಾಧಕರಿಗೆ
✨ ದಶಮಾನೋತ್ಸವ ರಾಜ್ಯ ಮಹಿಳಾ ಗೌರವ ಪ್ರಶಸ್ತಿ – 10 ಮಹಿಳಾ ಸಾಧಕರಿಗೆ
👥 ರಾಜ್ಯ ಸಲಹಾ ಸಮಿತಿ
ದಶಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದಲ್ಲಿ 10 ಜನ ಸಲಹಾ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗುತ್ತದೆ.
🎭 ದಶಮಾನೋತ್ಸವ ವಿಶೇಷ ಸಮ್ಮೇಳನಗಳು
ಮುಂದಿನ 5 ವರ್ಷಗಳೊಳಗೆ ರಾಜ್ಯ ಮಟ್ಟದಲ್ಲಿ 10 ಜಾನಪದ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ.
1️⃣ ರಾಜ್ಯ ವಕೀಲರ ಜಾನಪದ ಸಮ್ಮೇಳನ
2️⃣ ರಾಜ್ಯ ಮಹಿಳಾ ಜಾನಪದ ಸಮ್ಮೇಳನ
3️⃣ ರಾಜ್ಯ ಮಕ್ಕಳ ಜಾನಪದ ಸಮ್ಮೇಳನ
4️⃣ ರಾಜ್ಯ ಪೊಲೀಸ್ ಜಾನಪದ ಸಮ್ಮೇಳನ
5️⃣ ರಾಜ್ಯ ಯುವ ಜಾನಪದ ಸಮ್ಮೇಳನ
6️⃣ ರಾಜ್ಯ ಜನಪದ ಗಾಯಕರ ಸಮ್ಮೇಳನ
7️⃣ ರಾಜ್ಯ ಸೋಬಾನ ಹಾಡುಗಾರರ ಸಮ್ಮೇಳನ
8️⃣ ರಾಜ್ಯ ವೈದ್ಯರ ಜಾನಪದ ಸಮ್ಮೇಳನ
9️⃣ ರಾಜ್ಯ ಕನ್ನಡ ಪ್ರಾಧ್ಯಾಪಕರ ಜಾನಪದ ಸಮ್ಮೇಳನ
🔟 ರಾಜ್ಯ ಶಿಕ್ಷಕರ ಜಾನಪದ ಸಮ್ಮೇಳನ
🌿 ಕನ್ನಡ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ.
– ಡಾ. ಜಾನಪದ ಎಸ್. ಬಾಲಾಜಿ
ರಾಜ್ಯಾಧ್ಯಕ್ಷರು
ಕನ್ನಡ ಜಾನಪದ ಪರಿಷತ್
No comments:
Post a Comment